Friday, September 6, 2013

ಮಳೆಹನಿ..

 
ಇನಿಯನ ನೆನಪಲ್ಲಿ
ಮೋಡ ಸುರಿಸುತ್ತಿದ್ದ
ನಾಲ್ಕು ಹನಿಯ ಕಂಡು
ಮರುಗಿದ ರವಿ ಬಂದು
ಬದಲಿಸಿದ ಮೋಡದ ಛಾಯೆಯ
ಮಳೆಬಿಲ್ಲಾಗಿ.....

-----ರಾಮೇನಹಳ್ಳಿ ಜಗನ್ನಾಥ

Thursday, August 8, 2013

ಬರಬಾರದ ಮತ್ತೆ..

ಕೊರಗುತ್ತಲೇ ಇದ್ದಾಳೆ
ಕನಲುತ್ತಲೇ ಇದ್ದಾಳೆ
ಅವಳು ಅಂದಿನಿಂದಲೂ
ಅವ ಯಾರೋ ಏನೋ ಒಮ್ಮೆಯೂ
ಎಲ್ಲಿಯೂ ಕಂಡವನಲ್ಲ ಎಂದೂ
ಮೊದ-ಮೊದಲು ಮಾಮೂಲಿಯಂತೆ
ಇದ್ದವಳು..

ಕ್ಷಣದಲ್ಲೇ..!
ತನು-ಮನವ ಮನಃಪೂರ್ತಿ
ಒಪ್ಪಿಸಿಕೊಂಡಳು
ಅವನು ಬಂದಾಗ ಅಂದು.
ವಿಧುರನೋ ವಿಲಾಸಿಯೋ ಕಾಣೆ
ಒಟ್ಟಾರೆ ಬಂದವ ಅಂದು
ಇಂದಿಗೂ ಈ ಬೀದಿಗೆ ನಾಪತ್ತೆ
ಅಂದಿನಿಂದಲೂ ಬಂದವರೆಷ್ಟೋ
ಹೋದವರೆಷ್ಟೋ ಇವನಂತಹ
ಗಿರಾಕಿಗಳು ಮತ್ತೆ-ಮತ್ತೆ

ಆದರೆ,
ಅವನೇಕೆ ಹಾಗೆ.?
ಮನದಲ್ಲಿ ಉಳಿದುಕೊಂಡಿಹನು
ಎಂದುಕೊಡಿರುವಿರಾ ನೀವು

ಈ ಪ್ರೀತಿ ಹೆಸರಲ್ಲಿ ಉಳಿಸಿಹನಲ್ಲ
ನನ್ನವನೊಬ್ಬ ಇಂದಿಗೂ ನೋವು
ಅವನಂತಯೇ ಕಂಡಿದ್ದ ಆತ
ಕ್ಷಣಿಕದಲ್ಲೇ ಹಳೆತಲ್ಲ ಮರತೆ
ಅವನಲ್ಲಿ ಬೆರೆತೆ..

ನಂತರದಿ ನೆನಪಾದಾಗ ವಾಸ್ತವ
ನಿದ್ದೆ ಮಂಪರಿನಲ್ಲಿ
ನಾ ಎದ್ದು ನೋಡುವಷ್ಟರಲ್ಲಿ
ಅವನಾಗಿದ್ದ ಮರೆ ಮತ್ತೆ ಹೆಚ್ಚಿಸಿ
ನನ್ನ ನೋವಿನ ಹೊರೆ..

ಅದೇಕೋ,
ಎಂದೂ ಯಾರೂ ನೀಡದಷ್ಟು ಗರಿ-ಗರಿ ನೋಟುಗಳು
ತಲೆದಿಂಬಿನಡಿಯಲ್ಲಿ ಇಣಕಿ ನೋಡುತ್ತಿದ್ದವು
ಇಷ್ಟೇ-ಇಷ್ಟೇ ನಿನ್ನ ಬೆಲೆಯೆಂದು..!

ಅವನಾಗಿದ್ದರೆ ನನ್ನ ಕಂಡಾಗ
ಗುರುತು ಸಿಕ್ಕಿತೋ ಇಲ್ಲ
ಗುರುತು ಸಿಕ್ಕಿಯೂ ಸಿಕ್ಕದವನಂತೆ
ನಟಿಸಿದನೋ..

ಅದೆಲ್ಲಿ ಅರ್ಥವಾಗಬೇಕು ಹೇಳಿ
ಬಂದವರೆಲ್ಲಾ ನನ್ನ ಬಗ್ಗೆ ವಿಚಾರಿಸುತ್ತಾರೆಯೇ..?
ನಾ ಅವರನ್ನು ಅರಿಯಲು.
ಬಂದವರು ತಮ್ಮ-ತಮ್ಮ ಇಷ್ಟಾರ್ಥಗಳ
ಹೊಂದುವ ಬಯಕೆಯಲಿ
ತೋರುವರು ಆತುರ ಅಲ್ಲವೇ..?

ಇರಲಿರಲಿ ಬಿಡಿ
ಬರುವ ಗಿರಾಕಿಗಳ ಬಗ್ಗೆಯೇಕೆ ಕೊಂಕುಮಾತು
ಆದರೂ ಅವನ್ಯಾರು
ಒಮ್ಮೆಯಾದರೂ ಹಿಂದುರಿಗಿ ಬರಬಾರದೇ
ಈ ಬೀದಿಗೆ ಮತ್ತೆ..

--------ರಾಮೇನಹಳ್ಲಿ ಜಗನ್ನಾಥ
ಕಲೆ--ಲಕ್ಷ್ಮಣ ಕಲ್ಯಾಣಿ
(ಈ ಕವನ ಸುಮಾರು 8 ವರ್ಷಗಳ ಹಿಂದೆ ಬರೆದದ್ದು..)



Saturday, August 3, 2013

ಎರಡು ಪ್ರಾಣಿಗಳು..

ಇಲ್ಲೊಂದು  ಪ್ರಾಣಿಯ
 ತುಂಬ
ಕಿಚ್ಚು ತುಂಬಿದೆ..
ಇನ್ನೊಂದು ಪ್ರಾಣಿಯ
ತುಂಬಾ ಹೊಟ್ಟೆಕಿಚ್ಚಿದೆ..

-----ರಾಮೇನಹಳ್ಳಿ ಜಗನ್ನಾಥ

Friday, August 2, 2013

ಮೂಕರಾಗವಾಗಿ ಉಳಿದು ಹೋದ
ಎದೆಯ ಹಾವ-ಭಾವ
ತಿಳಿಯೋಲ್ಲ ತಿಳಿದುಕೊಳ್ಳೋಲ್ಲ
ಯಾವುದೇ ಹೆಣ್ಣು ಜೀವ...
-----------
ರಾಮೇನಹಳ್ಳಿ ಜಗನ್ನಾಥ

Wednesday, July 31, 2013

ರೆಪ್ಪೆ ಅಂಚಿನ ಸಂಚು...

ನಿನ್ನ ಕಣ್ಣ ರೆಪ್ಪೆ ಅಂಚು
ಹೊಂಚುಹಾಕಿ
ಮಾಡುತಿಹ ಸಂಚನು
ಕಂಡ ಈ ಅಲೆಮಾರಿ ಮನಸು
ಸುರಿಸುತಿಹುದು ನವಿರಾದ
ಆಸೆಕಿಡಿಯ ಜಡಿಮಳೆಯನು...

ತುಟಿ ಅಂಚಿನ ಸಣ್ಣದೊಂದು
ಕಿರುನಗೆಗೆ ಮೂಡಿದ
ಗುಳಿಗೆನ್ನೆ ಕಂಡ
ಈ ಅಲೆಮಾರಿ,
ಹೂಮನಸ ತುಂಬ
ನಿನ್ನ ಸೂರ ಕಟ್ಟಿ 
ನಿನಗಾಗೆ ಕಾದಿಹನು...

ನನ್ನ ದೇವಿ ನೀನು,
ಹೊಂಗನಸ ತೇರ ಕಟ್ಟಿ
ಕಾದಿಹ ಹುಡುಗನ
ಹೂಮನಸಲೀಗ ಶುರುವಾಗಿದೆ
ಅರಿವಿಲ್ಲದೇ ಮೆರವಣಿಗೆಯು...
ನಿನ್ನ ಕುರಿತೆ ಸಾಲು-ಸಾಲು
ಬರವಣಿಗೆಯು....

-------ರಾಮೇನಹಳ್ಳಿ ಜಗನ್ನಾಥ

Tuesday, July 16, 2013

ಹನಿಗಳು-

ಗೆಳತಿ,
ನೋಡೋ ಕಂಗಳಿಗೆ
ಕಾಣಬಹುದು ನೂರಾರು ಹುಡುಗಿಯರು..
ನಿನ್ನ ಕಾಣದ ನನ್ನ ಕಂಗಳಿಗೆ
ಕಾಣುವವರೆಲ್ಲಾ ನೀನೇ ಅನಿಸುವರು...
----------------------------------------
ಗೆಳತಿ,
ಖಾಲಿ ಹೃದಯದಿ
ರೇಖೆ ಬಿಡಿಸಿದೆ...
ಕ್ಯಾಮೆ ಇಲ್ಲದ
ಖಾಲಿ ಮನಸಿಗೆ
ಕೆಲಸ ನೀಡಿದೆ
ಅದಕೀಗ,
ಹೃದಯ ಮನಸುಗಳೆರಡು
ನಿನ್ನೆ ಬೇಡಿವೆ...
-------------------------------------
ಗೆಳತಿ
ನಿನ್ನ ನೆನಪುಗಳ ನಭದಲ್ಲೀಗ
ಮೋಡ ಕವಿದ ವಾತಾವರಣವಿದೆ..
ಅರಿಯದೇ ಸುರಿಯಬಹುದೇನೋ
ಈಗ ಮಳೆಹನಿ....
-----------------------------------------
ನನ್ನ ಮೌನದೊಳಗಿನ
ಸದ್ದು...
ನೀನೇ ಕಣೆ
ಓ ನನ್ನ ಮುದ್ದು....
------------------------------------
ರಾಮೇನಹಳ್ಳಿ ಜಗನ್ನಾಥ
ಗಳತಿ,
ಕೋಪದಲಿ ನೀನಾಡಿದ
ಮಾತುಗಳಿಗೆ ನಾ ಮೌನಿ..
ಏಕಾಂತದಲಿ ಆಲೋಚಿಸುವ
ವೇಳೆಯಲು ನಾ ನಿನ್ನ ಧ್ಯಾನಿ...

----ರಾಮೇನಹಳ್ಳಿ ಜಗನ್ನಾಥ

Monday, July 15, 2013

ಕದ್ದು-ಕದ್ದು..

ಗೆಳೆಯ,
ಪ್ರತಿದಿನವು ದಾರಿಯಲಿ
ನೀ ಎದುರಾದಾಗ
ಮನಸಿನ ಮಾತನು
ಕೇಳದ ಕಂಗಳು
ನೋಡುವವು ಕದ್ದು-ಕದ್ದು
ಓರೆಗಣ್ಣಲಿ ನಿನ್ನನ್ನೆ..

ಕಣ್ತುಂಬ ನೀನೆ ತುಂಬಿಕೊಂಡಿರೋ
ನನಗೀಗ ದೃಷ್ಠಿದೋಷ ಬಂದಿಹುದು
ಅರಿಯದೇ ಈ ಹೃದಯ
ನಿನ್ನ ಒಲವಲಿ ಜಾರಿಹುದು..

ಕನಸಿನ ಯಾವ ಪುಟವನು
ಖಾಲಿ ಉಳಿಸದೆ
ಆವರಿಸಿರೋ ನಿನ್ನ ಮುಖಪುಟಕೆ
ಕಲ್ಪನೆಯ ಕುಸರಿಯಲಿ
ನೀಡುತ್ತ ನೂರೆಂಟು ರೂಪ
ನಿನಗಾಗೆ ಕಾಯುತ ಕುಳಿತಿರೋ
ಈ ಪಾಪಿ ಹುಡುಗಿಯ ತೋಯ್ದಾಟ
ತಿಳಿಯದೆ ನಿನ್ನ ಹೃದಯಕೆ...

---ರಾಮೇನಹಳ್ಳಿ ಜಗನ್ನಾಥ

Sunday, July 14, 2013

ಮನವಿ...

ಗೆಳತಿ,
ನನ್ನ ಒಲವ ಮನ್ನಿಸದ ನೀನು
ನಡು ರಾತ್ರಿಯ ನಿದ್ರೆಯಲಿ
ಕನಸಾಗಿ ಬಂದು
ಕಣ್ಣೆದುರು ನಿಂತು
ನೀ ನೀಡಿದಾಗ
ನನ್ನ ಒಲವಿಗೆ ಸಮ್ಮತಿ
ಊಹಿಸು ನನ್ನಯ ಪರಿಸ್ಥಿತಿ..!
ಕನಸಾಗಿ ಬಂದು
ಖುಷಿಯ ತಂದಿತ್ತ ಈ ಗಳಿಗೆ
ಉಳಿದು ಬಿಡಲಿ ಹಾಗೆ ಕಣ್ತುಂಬ
ಶಾಶ್ವತ ನಿದ್ರೆ ಆವರಿಸುತ...

------ರಾಮೇನಹಳ್ಳಿ ಜಗನ್ನಾಥ

ಗೆಳತಿ,
ನಿನ್ನದೊಂದು ಕಣ್ಣಾ ಹನಿಗು
ತೋಯುವ ನಾನೇ
ನಿನ್ನ ಕಣ್ಣ ರೆಪ್ಪೆಗಳಾಗಿರುವಾಗ
ಏತಕೆ ಕಣ್ಣೀರು..
ಇನ್ನೆಂದು ಬಾರದಿರಲಿ
ಇರುವಾಗ ಜೊತೆಯಲ್ಲಿ ನಾನು...

..ರಾಮೇನಹಳ್ಳಿ ಜಗನ್ನಾಥ

Friday, May 17, 2013

ನೆನೆಪೆಂಬ ಸೋನೆ...

ನಿನ್ನ ನೆನಪೆಂಬ ಸೋನೆಗೆ 

ಸದಾ ತೇವಗೊಂಡಿಹ
ಈ ಪ್ರೇಮಿ ಮನಸು
ಕಾಯುತಿಹುದು  ಸದಾ
 ನೀ ಎಂದಾದರೂ
ಬರಬಹುದು ಎಂದು..

ಎದೆಗೂಡ ಜೋಪಡಿಯಲಿ
ಬಚ್ಚಿಟ್ಟ ಕನಸ
ನೆನೆಯೋದೆ ಸೊಗಸು
ಈ ಅಲೆಮಾರಿಗೆ..

ಮಳೆಮೋಡ ನೋವಿನಲಿ ಸುರಿಸಿದ
ನಾಲ್ಕು ಹನಿಯಂತಲ್ಲ.
ಪ್ರತಿಕ್ಷಣವು ಸುರಿಸಿಹುದು
ಕಣ್ಣೀರು..
ಈ ಅಲೆಮಾರಿ ಎದೆಗೂಡು...

ಕೊನೆಗೊಳ್ಳುವ ಮುನ್ನ
ಈ ಅಲೆಮಾರಿ ಬದುಕು
ಕಣ್ಮುಂದೆ ಬಾರೆ
ಕಡೆಗೊಂದು ಬಾರಿ
ಕಣ್ತುಂಬಿಕೊಂಡು ಖುಷಿಯಾಗುವೆ..

-----ರಾಮೇನಹಳ್ಳಿ ಜಗನ್ನಾಥ




Thursday, May 9, 2013

ರೇಖಾಚಿತ್ರ..


ಹೇ ಹುಡುಗ,                                                 
ಯಾವ ಸುಳಿವನು ನೀಡದೆ
ಕನಸಲಿ ಬಂದ ನಿನಗೆ
ಇರಬಾರದೇ ಚೂರಾದರು ಅಳುಕು..?
ಅನುಮತಿ ಕೇಳದೆ
ಮುತ್ತನು ನೀಡಿದೆ..
ಇತಿ-ಮಿತಿ ಇಲ್ಲದೆ
ಅತಿಕ್ರಮ ಮಾಡಿದೆ..
ಆ ನಿನ್ನ ರಭಸ ನೋಡಿ
ಆಗೋದೆ ಬೆಪ್ಪುತಕಡಿ..
ಈ ತುಟಿಯ ಗಾಯ ನೋಡಿ
ಚೂರಾಯ್ತು ಹೊಸ ಕನ್ನಡಿ..
ಇಡಿ ರಾತ್ರಿ ನೀ ಬಿಡಿಸಿದೆ
ರೇಖಾಚಿತ್ರವ
ಮುನ್ನುಡಿಯಲು-ಬೆನ್ನುಡಿಯಲು..
ಒಂದೊಂದು ಜಾಗದಿ
ಹೊಸಬಗೆಯ ಬೇಗುದಿ
ಆ ನಿನ್ನ ಸ್ಪರ್ಶದಿ ..
ಅಹಾ..! ಒಮ್ಮೊಮ್ಮೆ
ಅದು ಪುಳಕ
ಮೈಯ್ಯಲ್ಲಾ ನಡುಕ
ಒಟ್ಟಾರೆ ಸಿಹಿ ನರಕ...

-----ರಾಮೇನಹಳ್ಳಿ ಜಗನ್ನಾಥ


Monday, May 6, 2013

ಹಾಜರಾತಿ..

ಕನಸೆಂದರೆ, ಬರಿ
ಅವಳೇ.....
ಎಂದೂ ಗೈರು ಹಾಜರಾಗದೇ
ಶೇಕಡಾ ನೂರಕ್ಕೆ
ನೂರು ಹಾಜರಾತಿ
ಪಡೆದ ಅವಳು...
ಆಗಲೇ ಇಲ್ಲ
ವಾಸ್ತವದಿ ನನ್ನವಳು....

----ರಾಮೇನಹಳ್ಳಿ ಜಗನ್ನಾಥ

Saturday, May 4, 2013

ಕನಸು-ವಾಸ್ತವ

ಕನಸ ಅಣಕಿಸುವ ವಾಸ್ತವ..
ವಾಸ್ತವ ಕಂಡು ಮರುಗುವ
ಕನಸ ನಡುವೆ
ಹಿರಿಹಿಗ್ಗುವುದು ಮನಸು..
ಕನಸೇ ವಾಸ್ತವವಾದಾಗ...

----ರಾಮೇನಹಳ್ಳಿ ಜಗನ್ನಾಥ

Tuesday, April 16, 2013

ಜೊತೆಯಲ್ಲಿ ನಾನು...


ತುಸುವಾದರೂನಗಬಾರದೇ                                                   
ಬಳಿಬಂದರೂ...
ಪಿಸುದನಿಯಲಿ ನುಡಿಬಾರದೇ
ಏನಾದರೂ..
ಬೇಕಂತಲೇ ನೆಪಮಾಡುತ
ಬರಿ ಮಾತಿನ ಮನೆ ಮಾಡುತ..
ನಾ ಬಂದರೂ ಹತ್ತಿರ
ತಿಳಿದು-ತಿಳಿದು ಮಾಡುತೀಯ
ನಟನೆ ಜೋರು..
ಅಪರೂಪಕಾದರೂ ಅರಿವಾಗದಂತೆ ನೀನು
ಕೊಡಬಾರದೇನು ಒಂದು ಸಿಹಿ ಮುತ್ತನು..
ನನ್ನ ಸಹವಾಸದಲ್ಲಾದರೂ
ತುಸು ಹಾಳಗಬಾರದೇನು..?
ಈ ವಯಸಿಗಾದರೂ ವಸಿ ಬೆಲೆಕೊಟ್ಟು
ತುಸು ಪೋಲಿಯಾಗಬಾರದೇನು..?
ಇರುವಾಗ ಪ್ರತಿಕ್ಷಣವು

ಜೊತೆಯಲ್ಲಿ ನಾನು...

Monday, March 4, 2013

ಗುಳಿಗೆನ್ನೆ ಹುಡುಗಿಗೊಂದು ಪತ್ರ...

ಪ್ರಿಯ ಸಖಿ,
ಸೌಖ್ಯವೇ...?
ಇಲ್ಲಿ ಮಳೆಗಾಲ ತರುತಿದೆ
ಮತ್ತೆ-ಮತ್ತೆ ಹೊತ್ತು ನಿನ್ನ ನೆನಪ..
ಮುಂಜಾನೆಯ ರವಿ ಕೂಡ ಕದ ತಟ್ಟಿಹ
ಬಲು ತಡವಾಗಿ..
ಇನ್ನ ಬೀಳೋ ಕನಸುಗಳು ಬರಿ
ನಿನ್ನ ನೆನಪಿನ ಮೂಟೆ ಹೊತ್ತು ತಂದಿವೆ..
ಕನಸೆಂದರೇ ಏನು, ಬರಿ ಭವಿಷ್ಯವಾ..?

ಯಾವುದರ ಹಂಗಿಲ್ಲ
ನಿನ್ನ ನೆನಪಿನ ಗುಂಗಲ್ಲಿ..
ನೀ ನನಗಿಟ್ಟ ಆ ಮೊದಲ
ಪತ್ರ ಹೊಮ್ಮಿಸಿದೆ
ನೆನಪಿನ ನಾದವ ತನ್ನ ನಾಭಿಯಿಂದ...

ಗುಳಿಗೆನ್ನೆ ಹುಡುಗಿ ನೀನು,
ನಿನ್ನ ಆ ನಗು ಕಾಡುತ್ತಿದೆ ಸದಾ..
ವಾಸ್ತವ ಏನ ಬೇಡುತ್ತಿದೆಯೋ
ತಿಳಿಯದು...
ಮತ್ತೆ-ಮತ್ತೆ ಒಲವಾಗುತ
ಪದೇ-ಪದೆ ಮನಸೇಕೋ
ನೆನಪಿಗೆ ಜಾರಿಹಿದು..

ಕಡಲ ದಡದಲ್ಲೂ
ಮುಗಿಲ ಮೊರೆಯಲ್ಲೂ
ಏಕಾಂತದ ಸುಳಿ
ಒಳ ಹೊಕ್ಕಿರುವ ಆ ಗುಳಿ
ಸುಡುತಿಹುದು
ಈ ಚಳಿಗಾಲದಲ್ಲೂ...

ಒಡಲ ಒಳದನಿ
ಸುರಿಸೋ ಕಂಬನಿ
ಒರೆಸಲು ಯಾರಿಲ್ಲದ
ಈ ಅಲೆಮಾರಿ ದನಿ
ಎಂದೂ ಅನಾಥ
ಎಂದಿನಂತೆ...

ಇಂತಿ..
ನಿನ್ನ ಸಖ..


ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Thursday, February 21, 2013

ಮುಂಗುರುಳು...

ಬೀಸುತಿರೋ ಜೋರು ಗಾಳಿ
ಗೆಳತಿ ಗಲ್ಲದ ಮೇಲೆ
ಮಾಡುತಿರೋ ತೊಂದರೆ ನೋಡಿ..
ಅದರ ಮೇಲೆ ನಡೆಸುವ
ಮುಷ್ಠಿ ಪ್ರಹರವ
ಏನೋ ಗುನುಗುತ
ದಾರಿಯಲಿ ಹಾಗೆ ಸಾಗುವ
ಬಾನಿನೆಡೆಗೆ ನೋಡುತ
ಸೃಷ್ಟಿ ಅನುಭವ
ಸೊಗಸು ಎನ್ನುತ...

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್


Tuesday, February 19, 2013

ಸಾಕ್ಷಿ..




ಅರಿವಿಲ್ಲದೇ ಬಿದ್ದ ಈ ಕಣ್ಣ ಹನಿಗಳೇ
ನನ್ನ ನೈಜ ಪ್ರೇಮಕ್ಕೆ ಸಾಕ್ಷಿ ಕಣೆ
ಏನೂ ಬದಲೆನಿಸದೇ
ನನ್ನ ಮತ್ತು ಆತನ ದನಿಯ ನಡುವಲಿ..

ನೈಜ ಪ್ರೀತಿಯೇ ಅರ್ಥವಾಗುವುದಿಲ್ಲವಲ್ಲ
ನಿಮ್ಮಂತ ಮರುಳು ಹುಡುಗಿಯರಿಗೆ
ಪ್ರೇಮವೆಂದರೇ ಹಿಡಿ-ಹಿಡಿ ಬೂಟಾಟಿಕೆಯ
ಮಾತುಗಳ ಆಶ್ವಾಸನೆ ಅಲ್ಲ..

ಹಿಡಿದಿಟ್ಟ ಎದೆಯ ಭಾವಗಳ
ಪ್ರತಿಬಿಂಬ  ಬದಲಿಸಿದಾಗ
ಪ್ರೇಮಿಯ ಹಾವ-ಭಾವ
ಅರ್ಥವಾಗದೇನು..?
ಯಾವುದು ಸತ್ಯಕ್ಕೆ ಸನಿಹ ಎಂದು...

ಏನು ಮಾಡುತ್ತೀರಿ ಹೇಳು
ನೀವು ಹುಡುಗಿಯರೇ ಹೀಗೆ
ಬೇಕಿರುವುದು ಬರಿ ಮಾತು,
ಜೊತೆಗಾಗಿ ಸುತ್ತಾಟ..
ಇವಿಷ್ಟೇ ಪ್ರೇಮ ಎಂದುಕೊಂಡಿರುವಿರಿ..

ನಿಜವಾದ ಪ್ರೇಮ ಎಂದೂ ಮೂಕವೇ
ಹಸಿರಸಿರ ಎಲೆಗಳ ನಡುವಿನ ಮೊಗ್ಗಂತೆ
ಹಾಗೂ ಈ ಉಸಿರ ಏರಿಳಿತಗಳ ನಡುವೆ
ಜಪಿಸುವ ನಿಮ್ಮ ಹೆಸರಂತೆ..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

ಸಮರ್ಥನೆ...



ವ್ಯಕ್ತಿಗಳು ನೀಡುವುದು
ಸರಿಯಾಗಿ ಒಂದೇ,
ತಮ್ಮೆಲ್ಲಾ ತಪ್ಪುಗಳಿಗು
ಸಮರ್ಥನೆ...

ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್

Friday, February 8, 2013

ಹನಿಗಳು-5

   

1.     ಅಮಲು..

          ನಿನ್ನ ಕಲ್ಪನೆಯ
          ಖುಷಿಯೊಂದು ಅಮಲು
          ಎಂದು ತಿಳಿಸಿದ್ದು
          ನಿನ್ನ ವಿದಾಯ..

2.     ಹಗರಣ

          ಹಳೆ ಗೆಳತಿ
          ಕೈ ಕೊಟ್ಟಳು ವಿನಾಕಾರಣ
          ಹೊಸ ಗೆಳತಿ
          ಕೇಳುವಳು ಎಲ್ಲವಕೂ ಕಾರಣ
          ಒಟ್ಟಾರೆ ಪ್ರೀತಿಯಲಿ
          ಈ ಕಾರಣಗಳದ್ದೆ
          ಬಹು ದೊಡ್ಡ ಹಗರಣ..

        ಆತ್ಮೀಯವಾಗಿ,
        ಜಗನ್ನಾಥ.ಆರ್.ಎನ್
 

Monday, February 4, 2013

ಆಸೆಯೇ ದುಃಖಕೆ ಮೂಲ...




ದಾರಿಯ ಮಧ್ಯೆ
ಕವಲಾದವಳು ನೀನು
ಬದುಕಿನ ಮಧ್ಯೆ
ಒಲವ ಹೆಸರಲ್ಲಿ
ಬಂಧಿ ಆದವನು ನಾನು
ಉಳಿಸಿಕೊಳ್ಳಲಾರದೇ
ಹೊದೆಯಲ್ಲ ನಮ್ಮಿಬ್ಬರ ನಡುವಿನ ಮಾತನು..

ಸಮಯಕ್ಕೆ ಅರ್ಥ
ವ್ಯಯಿಸಿದ್ದಕ್ಕೆ ಸಿಕ್ಕರೆ ಉತ್ತರ
ಇಲ್ಲವಾದರೇ ಅದೂ ಕೇಳದೇ
ಇರುವುದೇ ವ್ಯಯಿಸಿದ್ದಕ್ಕೆ ಪ್ರಶ್ನೆ.(.?.)

ಸುಮ್ಮನೇಕೋ ಮೂಕ ಸಾಕ್ಷಿಗಳಾದವು
ನಮ್ಮ ಪ್ರೇಮದ ನಡುವಲಿ
ಬಲಿಪಶುವಾದ ವಸ್ತುಗಳು
ನಮ್ಮ ಪ್ರೇಮವೇ ಮೂಕರಾಗವಾಗಿರುವಾಗ
ಸಾಕ್ಷಿಗಳು ಮೂಕವಾಗಿರುವುದರಲ್ಲೇನು
ಬಂತು ಹೇಳು..

ಆಸೆಗಳ ಕಣಜ ತಾನೆ.!
ನನ್ನಂತೆ ಈ ಮನುಜ
ನಿನ್ನ ಪಡೆದೇ ಪಡೆಯುವನೆಂದು
ಇದ್ದ ಆಸೆಯೋ ದುರಾಸೆಯೋ
ಆಯಿತಲ್ಲ ಕೊನೆಗೂ ನಿರಾಸೆ

ಮನ ಸುಮ್ಮನಾಯಿತು
ಯಾಕೆ ಗೊತ್ತೇ..?
ಆಸೆಯೇ ದುಃಖಕೆ ಮೂಲ
ಎಂಬ ಬುದ್ಧನ ಮಾತು ನೆನೆದು..

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Sunday, February 3, 2013

ಹನಿ-4


ಅಂಕಣ

ಕಾರಣವಿಲ್ಲದೇ
ಕನಸಲಿ ಬಂದೆ ನೀನು..
ಉತ್ತರ ನೀಡದೇ
ತಡವರಿಸಿ ಹೋದೆ ನಾನು..
ಆ ಒಂದು ಪ್ರಶ್ನೆಗೆ
ಏನ ಹೇಳಲಿ ನಾನು ತಕ್ಷಣ
ಮನವಿನ್ನು ಖಾಲಿ ಅಂಕಣ..

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Friday, February 1, 2013

ಹನಿಗಳು-3




7-8 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇಂಜಿನೀಯರಿಂಗ್ ಓದುವಾಗ ಬರೆದ ಕೆಲವು ಹನಿಗಳು..
1. ಹುಡುಗಾಟಿಕೆ

  ವಯಸ್ಸಿನಲ್ಲಿ
  ಹುಡುಗ-ಹುಡುಗಿಯರಲ್ಲಿರಬೇಕಂತೆ
  ಸ್ವಲ್ಪವಾದರೂ ‘ಹುಡುಗಾಟಿಕೆ’
  ಆದರೆ ಇತ್ತೀಚೆಗೆ
  ಹುಡುಗಿಯರಿಗೆ
  ಹುಡುಗ ‘ಆಟಿಕೆ’

--------------------------------
2.ದುಬಾರಿ

  ಅಂದು ಗರ್ಲ್ ಫ್ರೆಂಡುಗಳು
  ಆಗುತ್ತಿದ್ದರು
  ಎಲ್ಲಕೂ “ಆಭಾರಿ”
  ಆದರೆ ಇಂದು ಗರ್ಲ್ ಫ್ರೆಂಡುಗಳು
  ಬಲು “ದುಭಾರಿ”

--------------------------------
3. ಪ್ರಶ್ನೆ..?
  ಅವನಂದನು ನಲ್ಲೆ
  ನೀ ಹುಣ್ಣಿಮೆ ದಿನದ
  ಚಂದಿರನಂತೆ ಎಂದು
  ಅವಳಂದಳು ಬೇರೆ ದಿನಗಳು
  ಇನ್ಯಾರಂತೆ ಎಂದು..?!

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Thursday, January 31, 2013

ಪ್ರೇಮ...



ಮರೆಮಾಚಿ ನೋಡುವುದರಿಂದ
ಆರಂಭಗೊಂಡ ಪ್ರೇಮ
ಭಾವ ಬಂಧನದಿಂದ
ಸಿಗುವುದೇ ಈ ಪ್ರೇಮ..
ಬರೆಯೋ ಪ್ರೇಮ ಪತ್ರಗಳ
ಕೊಡಲಾಗದೇ ಹರಿಯುವುದರಿಂದ
ತಿಳಿಯುವುದೇ ಈ ಪ್ರೇಮ..
ಕಣ್ಣ ಹನಿಗಳಿಂದ
ಫಲಿಸುವುದೇ ಈ ಪ್ರೇಮ..
ಮೂಕರಾಗವಾಗಿ ಉಳಿದುಹೋದ
ಎದೆಯ ಹಾವ-ಭಾವ
ತಿಳಿಯೋಲ್ಲ ತಿಳಿದುಕೊಳ್ಳೋಲ್ಲ
ಯಾವುದೇ ಹೆಣ್ಣು ಜೀವ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್